ಆಧುನಿಕ ಯಕ್ಷಗಾನದಲ್ಲಿ ``ಕ್ಷೇತ್ರ ಮಹಾತ್ಮೆ``ಗಳ ಪಾತ್ರ.
ಲೇಖಕರು : ಯಕ್ಷ ಸೌರಭ
ಬುಧವಾರ, ಜನವರಿ 1 , 2014
|
ವಾದ್ಯ ಘೋಷಗಳ ಶಬ್ದ, ಸಿಡಿಮದ್ದುಗಳ ಆರ್ಭಟ, ಕೈಯಲೊಂದು ದೊಂದಿ, ರಂಗಸ್ಥಳದ ಎದುರಿನಿಂದ ಅಬ್ಬರದ ವೇಷಗಳ ಪ್ರವೇಶ. ಎಂತಹ ಪ್ರೇಕ್ಷಕನಾದರೂ ಆತನ ಮೈ ರೊಮಾಂಚನಗೊಳ್ಳುವುದು ಸಹಜ. ಈಗಲೂ ಯಕ್ಷಗಾನದಲ್ಲಿ ಕ್ಷೇತ್ರ ಮಹಾತ್ಮೆ ಅಭಿಮಾನಿಗಳ ಪ್ರತ್ಯೇಕವಾದ ಪ್ರೇಕ್ಷಕ ವರ್ಗವಿದೆ.
ಎಷ್ಟು ನೋಡಿದರು ಮತ್ತೊಮೆ ನೋಡಬೇಕೆನಿಸುವ "ಕ್ಷೇತ್ರ ಮಹಾತ್ಮೆ"ಗಳು ಯಕ್ಷರಂಗಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಹಲವಾರು ದೇವಳಗಳ "ಕ್ಷೇತ್ರ ಮಹಾತ್ಮೆ"ಗಳು ಇಂದಿಗೂ ತನ್ನ ಖ್ಯಾತಿಯನ್ನ ಉಳಿಸಿಕೊಂಡಿದೆ. ಆದರೆ ಇಂದಿನ ಸಾಮಾಜಿಕ ಕಥನಗಳು ಇಂತಹ ಆರ್ಭಟಿಯ ವಸ್ತುಗಳಿಂದ ದೂರಗೊಂಡಿದೆ. ಅಬ್ಬರದ ವೇಷಗಳನ್ನು ಬಯಸಿ ಬರುವ ಪ್ರೇಕ್ಷಕನ ಹಸಿವನ್ನು ಸಾಮಾಜಿಕ ಕಥನಗಳು ನೀಗಿಸಲಾಗುತ್ತಿಲ್ಲ.
ಲೆಕ್ಕವಿಲ್ಲದಷ್ಟು ಪ್ರದರ್ಶನ ಕಂಡಿರುವ "ದೇವಿ ಮಹಾತ್ಮೆ"ಯಂತಹ ರಾಕ್ಷಸ ವೇಷಗಳಿಂದ ಕೂಡಿರುವ ಪ್ರಸಂಗ ಇನ್ನೊಂದಿಲ್ಲ. ಇಂತಹ ಅದ್ಭುತ ಪ್ರಸಂಗಗಳೊಂದಿಗೆ ಇಂದಿನ ಸಾಮಾಜಿಕ ಪ್ರಸಂಗಗಳ ತುಲನೆ ಹಾಸ್ಯಾಸ್ಪದವೆನಿಸುತ್ತದೆ. ದೈವ ಶಕ್ತಿಯ ಸಂದೇಶ ಸಾರುವ ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆ, ಮಂದಾರ್ತಿ ಕ್ಷೇತ್ರ ಮಹಾತ್ಮೆಯಂತಹ ಪುಣ್ಯ ಕಥೆಗಳ ಎತ್ತರಕ್ಕೆ ಸಿನಿಮಾ ಜಗತ್ತಿನಿಂದ ಪ್ರೇರಿತವಾದ ಪ್ರಸಂಗಗಳು ನಿಲ್ಲಲಾರವು. ಸಿನಿಮಾದಿಂದ ಸ್ಪೂರ್ತಿಗೊಂಡ ಪ್ರಸಂಗಗಳು ಕೇವಲ ಒಂದು ವರ್ಷದ ತಿರುಗಾಟಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಇಂತಹ ಪ್ರಸಂಗಗಳು ಪಾರಂಪರಿಕ ಯಕ್ಷಗಾನ ಒಡ್ಡೊಲಗಳನ್ನೂ ಕೂಡ ಒಳಗೊಂಡಿರುವುದಿಲ್ಲ.
ಆದರೆ "ಕ್ಷೇತ್ರ ಮಹಾತ್ಮೆ" ಪ್ರಸಂಗಗಳು ಈಗ ಮತ್ತೊಮ್ಮೆ ಕ್ರಾಂತಿಯನ್ನ ಸ್ರಷ್ಟಿಸುತ್ತಿವೆ. ಮೇಳಗಳು ಪುನಃ ಅಬ್ಬರದ ವೇಷಗಳ ಮೂಲಕ ಜನರನ್ನು ರಂಜಿಸುತ್ತಿವೆ. ಅನೇಕ ಸ್ಥಳ ಪುರಾಣಗಳು ರಚಿತಗೊಳ್ಳುತ್ತಿವೆ.
ಆದರೆ ಇಂತಹ ರಚಿತವಾದ "ಕ್ಷೇತ್ರ ಮಹಾತ್ಮೆ"ಗಳು ಮತ್ತು ಯಕ್ಷರಂಗದ ಮೂಲ ಚೌಕಟ್ಟಿನಲ್ಲಿಲದ ಕೋಲದ ವೇಷಗಳ ಬಗ್ಗೆ ಅಸಾಮಾಧಾನ ಹೊಂದಿರುವ ವರ್ಗವೂ ಇದೆ.
ಏನೇ ಆಗಲಿ ಯಕ್ಷಲೋಕದಲ್ಲಿ ಸಾಮಾಜಿಕ ಕಥನಗಳ ಎದುರು ಮರೆಯಾಗಿದ್ದ "ಕ್ಷೇತ್ರ ಮಹಾತ್ಮೆ"ಗಳು ಈಗ ಮತ್ತೊಮ್ಮೆ ಗರಿಗೆದರಿ ಸಾಮಾಜಿಕ ಕಥೆಗಳಿಗೆ ಸೆಡ್ಡು ಹೊಡೆಯುವಂತೆ ನಿಂತಿವೆ. ಈ ಬೆಳವಣಿಗೆ "ಕ್ಷೇತ್ರ ಮಹಾತ್ಮೆ" ಪ್ರಸಂಗಗಳ ಅಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
|
|
|